Wednesday, 10 August 2016

ಮಹಾಭಾರತಕಥಾ* ಭೀಷ್ಮಪರ್ವ-7

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-7🕉
            ಅರ್ಜುನನು, ``ನಿನ್ನನ್ನು ಪೂಜಿಸುವ ಭಕ್ತರೂ ಇದ್ದಾರೆ, ಪರಬ್ರಹ್ಮನ್ನು ಅರಾಧಿಸುವವರೂ ಇದ್ದಾರೆ; ಇವರಲ್ಲಿ ಯಾರನ್ನು ಉತ್ತಮ ಯೋಗಿ ಎನ್ನಬಹುದು?" ಎಂದನು.  
       ಕೃಷ್ಣನು, ``ಅವರಿಬ್ಬರೂ ಸೇರುವುದು ನನ್ನನ್ನೇ. ಕೆಲವರು ತಮ್ಮ ಇಂದ್ರಿಯಗಳನ್ನೆಲ್ಲ ಸ್ಥಗಿತಗೊಳಿಸಿ, ಯಾವಾಗಲೂ ಸಮಸ್ಥಿತಿಯಲ್ಲಿರುತ್ತ, ಸರ್ವಭೂತಗಳಿಗೂ ಹಿತವನ್ನೆ ಮಾಡುತ್ತ ಅವಿನಾಶಿಯಾದ ಪರಬ್ರಹ್ಮನನ್ನು ಧ್ಯಾನಿಸುವರು; ಆ ಮೂಲಕ ನನ್ನ ಬಳಿಗೆ ಬರುವರು. ಯಾರು ಸಂಪೂರ್ಣ ನಂಬಿಕೆಯಿಂದ ನನ್ನ ಮೇಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನೇ ಪೂಜಿಸುತ್ತಿರುವರೋ ಅವರೇ ಪರಿಪೂರ್ಣ ಯೋಗಿಗಳು ಎಂದು ನಾನು ಪರಿಗಣಿಸುತ್ತೇನೆ. ಪರಬ್ರಹ್ಮ ಆರಾಧನೆ ಬಹು ಕಷ್ಟದ ಹಾದಿ; ಗುರಿ ತಲುಪುವುದೂ ಕಷ್ಟವೇ. ಅದಕ್ಕಿಂತ ಈ ಇನ್ನೊಂದು ಹಾದಿ ಸುಗಮ. ಯಾರು ಸಮಸ್ತ ಕರ್ಮಗಳನ್ನೂ ನನಗೇ ಸಮರ್ಪಿಸಿ, ನನ್ನನ್ನೇ ಅತ್ಯಂತ ಪ್ರೀತಿಯ ಆರಾಧ್ಯವನ್ನಾಗಿ ಮಾಡಿಕೊಂಡು, ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನನ್ನು ಧ್ಯಾನಿಸುವರೋ, ಅವರನ್ನು ಈ ಸಂಸಾರಸಾಗರದಿಂದ ನಾನೇ ಕೈಹಿಡಿದು ಪಾರುಮಾಡುತ್ತೇನೆ. ನಿನ್ನ ಮನಸ್ಸು, ಚಿಂತನೆಗಳು ಎಲ್ಲವನ್ನೂ ನನ್ನ ಮೇಲೇ ಇರಿಸು; ನಿಸ್ಸಂಶಯವಾಗಿ ನೀನು ನನ್ನನ್ನೇ ಸೇರುತ್ತೀಯೆ" ಎಂದು ಕಿವಿಮಾತು ಹೇಳಿದನು.  
         ಅರ್ಜುನನು, ``ಕೃಷ್ಣ, ಸಂನ್ಯಾಸದ ನಿಜವಾದ ಸ್ವರೂಪವನ್ನು ನಾನು ತಿಳಿಯಬೇಕೆಂದಿರುವೆನು. ದಯವಿಟ್ಟು ಅದರ ಬಗ್ಗೆ ನನಗೆ ಹೇಳು" ಎನ್ನಲು, ಕೃಷ್ಣನು, ``ಆಸೆಯಿಂದ ಉದ್ಯುಕ್ತವಾದ ಕೆಲಸಗಳನ್ನು ಪರಿತ್ಯಜಿಸುವುದೇ ಸಂನ್ಯಾಸವೆಂದು ಋಷಿಗಳು ಹೇಳುವರು. ಕರ್ಮಫಲಗಳನ್ನು ಸಮರ್ಪಿಸುವುದೇ ತ್ಯಾಗವೆನ್ನಿಸಿಕೊಳ್ಳುವುದು. ಕರ್ಮವನ್ನು ಸಂಪೂರ್ಣ ತ್ಯಜಿಸಬೇಕೆಂದು ಕೆಲವರೂ, ಯಜ್ಞದಾನ ತಪಸ್ಸು ಮುಂತಾದುವುಗಳನ್ನು ಬಿಡತಕ್ಕದ್ದಲ್ಲವೆಂದು ಇನ್ನು ಕೆಲವರೂ ಹೇಳುವರು. ನಾನು ಇದರಲ್ಲಿರುವ ನಿಜವಾದ ತಥ್ಯವನ್ನು ತಿಳಿಸುವೆನು ಕೇಳು. 
ಯಾವುದೇ ರೀತಿಯ ಕೆಲಸವನ್ನು ಬಿಡತಕ್ಕದ್ದಲ್ಲ, ಮಾಡಿ ಮುಗಿಸತಕ್ಕದ್ದು. ಆದರೆ ಅದರ ಫಲಾಪೇಕ್ಷೆಯನ್ನು ಭಗವಂತನಲ್ಲಿ ಸಮರ್ಪಿಸಿ ಮಾಡಬೇಕು. ಹೀಗೆಂದರೆ ಕರ್ತವ್ಯವಿಮುಖನಾಗಬೇಕು ಎಂದಲ್ಲ. ಕರ್ಮಫಲಕ್ಕೆ ನಮ್ಮ ಮನಸ್ಸು ಅಂಟಿಕೊಂಡಿರಬಾರದು ಅಷ್ಟೆ. ಹಾಗೆ ಅಂಟಿಕೊಂಡಿಲ್ಲದ ಕರ್ಮಿಯ `ನಾನು' ಎಂಬ ಭಾವವಿಲ್ಲದೆ ಸ್ಥಿರವಾಗಿದ್ದು ಕರ್ಮೋತ್ಸಾಹಿಯಾಗಿರುವನು; ಯಶಸ್ಸು ಅಪಯಶಸ್ಸುಗಳಿಂದ ವಿಚಲಿತನಾಗುವುದಿಲ್ಲ. ಎಲ್ಲಿಯೂ ಲಿಪ್ತವಾಗದ ಮನಸ್ಸುಳ್ಳಂಥ ಆತ್ಮನಿಗ್ರಹಿಯಾದವನೇ ಭಗವಂತನೊಡನೆ ಒಂದಾಗಲು ಯೋಗ್ಯನು.  
        ಸ್ಪಷ್ಟವಾದ ದೃಷ್ಟಿಯುಳ್ಳವನಾಗಿ, ಆತ್ಮನಿಗ್ರಹಿಯಾಗಿ, ಇಂದ್ರಿಯವಿಷಯಗಳಿಂದ ವಿಮುಖನಾಗಿ, ಇಷ್ಟಾನಿಷ್ಟಗಳಿಂದ ದೂರವಾಗಿ, ಏಕಾಂತದಲ್ಲಿರುತ್ತ, ಮಾತನ್ನೂ ಮನಸ್ಸನ್ನೂ ದೇಹವನ್ನೂ ಹದ್ದಿನಲ್ಲಿರಿಸಿಕೊಂಡು, ಯಾವಾಗಲೂ ಧ್ಯಾನನಿರತನಾಗಿ, ಮೋಹದಿಂದ ಮುಕ್ತನಾಗಿ, ತಿರಸ್ಕಾರ ಹಿಂಸೆ ಅಹಂಕಾರ ಅತ್ಯಾಶೆ ಕ್ರೋಧ ಲೋಭಗಳನ್ನು ಬಿಟ್ಟು, ಶಾಂತಮನಸ್ಕನಾಗಿರುವ ಯೋಗಿಯು ಭಗವಂತನೊಂದಿಗೆ ಒಂದಾಗಲು ಯೋಗ್ಯನು. ಹಾಗೆ ಭಗವಂತನಲ್ಲಿ ಐಕ್ಯಹೊಂದಿ ಶಾಂತಚೇತನನಾದವನು ಆಶಿಸುವುದೂ ಇಲ್ಲ, ದುಃಖಿಸುವುದೂ ಇಲ್ಲ. ಸರ್ವಭೂತಗಳನ್ನೂ ಸಮನಾಗಿ ಭಾವಿಸುತ್ತ ನನ್ನ ಭಕ್ತನಾಗಿರುವನು. ಯಾವಾಗಲೂ ಕರ್ಮನಿರತನಾಗಿದ್ದರೂ, ನನ್ನಲ್ಲಿಯೇ ಆಶ್ರಯಹೊಂದಿ ಕೊನೆಗೆ ನನ್ನ ಕೃಪೆಯಿಂದ ಅವಿನಾಶಿಯೂ ಅನಂತನೂ ಆದ ನನ್ನನ್ನೇ ಸೇರುವನು.  
       ನೀನು ನಿನ್ನ ಮನಸ್ಸನ್ನು ನನ್ನ ಮೇಲೇ ಸ್ಥಿರವಾಗಿಡು. ನನ್ನನ್ನೇ ನೆಚ್ಚಿಕೋ. ಎಲ್ಲವನ್ನೂ ನನಗೇ ಸಮರ್ಪಿಸು. ನನ್ನನ್ನೇ ನಮಸ್ಕರಿಸು. ಕೊನೆಗೆ ನನ್ನನ್ನೇ ಸೇರುತ್ತೀಯೆ. ನನಗೆ ಪ್ರಿಯನಾದ ನಿನಗೆ ಇದನ್ನು ನಾನು ಪ್ರತಿಜ್ಞೆಮಾಡಿ ಹೇಳುತ್ತೇನೆ.  
        ಸಮಸ್ತ ಕರ್ತವ್ಯಗಳನ್ನೂ ನನಗೆ ಸಮರ್ಪಿಸಿ ಆಶ್ರಯಕ್ಕಾಗಿ ನನ್ನ ಬಳಿಗೆ ಬಾ. ದುಃಖಿಸಬೇಡ. ನಿನ್ನನ್ನು ಎಲ್ಲ ಪಾಪಗಳಿಂದಲೂ ನಾನು ಮುಕ್ತನಾಗಿಸುತ್ತೇನೆ. ಗುಹ್ಯಾತ್ ಗುಹ್ಯವಾದ ಈ ವಿವೇಕವನ್ನು ನಿನಗೆ ಹೇಳಿದ್ದೇನೆ. ಅದನ್ನು ಪೂರ್ಣವಾಗಿ ಪರಿಗಣಿಸು, ಚಿಂತಿಸು. ಅನಂತರ ನಿನಗೆ ಹೇಗೆ ಎನಿಸುವುದೋ ಹಾಗೆ ಮಾಡು" ಎಂದನು.  
    ಅರ್ಜುನನು ``ನನಗೆ ಕವಿದಿದ್ದ ಮೋಹವು ನಾಶವಾಯಿತು. ಸಂಶಯವೆಲ್ಲ ಪರಿಹಾರವಾಯಿತು. ಈಗ ನಾನು ನಿನ್ನ ಆಣತಿಯಂತೆ ನಡೆಯಲು ಸಿದ್ಧನಾಗಿರುವೆನು" ಎಂದನು.  ಸಂತೋಷದಿಂದ ಗಾಂಡೀವವನ್ನೆತ್ತಿಕೊಂಡ ಅರ್ಜುನನು, ಶ್ವೇತಾಶ್ವಗಳನ್ನು ಮುನ್ನಡೆಸುತ್ತಿದ್ದ ಕೃಷ್ಣನೊಡನೆ ತನ್ನ ಬಂಗಾರದ ರಥದಲ್ಲಿ ಭೀಷ್ಮನ ಬೆಳ್ಳಿಯ ರಥವಿರುವಲ್ಲಿಗೆ ಬಂದನು.

No comments:

Post a Comment