Monday, 8 August 2016

*ಮಹಾಭಾರತಕಥಾ* ಭೀಷ್ಮಪರ್ವ-5🕉

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-5🕉

      ನಾನು ಈ ಯೋಗವನ್ನು ವಿವಸ್ವಂತನಿಗೆ ಬೋಧಿಸಿದೆ; ಅವನು ಇದನ್ನು ಮನುವಿಗೂ, ಮನುವು ಇಕ್ಷ್ವಾಕುವಿಗೂ ಹೇಳಿದನು; ಅನಂತರ ಇದು ಪರಂಪರೆಯಿಂದ ಇಳಿದುಬಂತು. ಕಾಲಾನುಕ್ರಮದಲ್ಲಿ ಇತ್ತೀಚೆಗೆ ಮಸುಕಾಗಿ ಹೋಗಿರುವ ಈ ರಹಸ್ಯವನ್ನು ಪ್ರಿಯ ಸ್ನೇಹಿತನಾದ ನಿನಗೆ ನಾನು ಹೇಳಬೇಕೆಂದಿದ್ದೇನೆ. "  
      ಅರ್ಜುನನು ಅಚ್ಚರಿಯಿಂದ. ``ಆದರೆ ಕೃಷ್ಣ, ವಿವಸ್ವಂತನು ನೀನು ಹುಟ್ಟುವ ಯುಗ ಯುಗಗಳ ಹಿಂದೆ ಇದ್ದವನು. ನೀನು ಇದನ್ನು ಅವನಿಗೆ ಹೇಗೆ ಬೋಧಿಸಿದೆ ಎಂಬುದು ನನಗೆ ಅರ್ಥವಾಗುತಿಲ್ಲ!" ಎನ್ನಲು, ಕೃಷ್ಣನು ನಕ್ಕು, ``ನಾನೂ ನೀನೂ ಅನೇಕಾನೇಕ ಜನ್ಮಗಳನ್ನು ದಾಟಿ ಬಂದಿರುವೆವು. ನಾನು ಅವುಗಳನ್ನು ತಿಳಿದಿರುವೆನು; ಆದರೆ ನಿನಗೆ ಅದು ತಿಳಿಯದು. ನಾನು ಅನಾದಿ ಮತ್ತು ಅನಂತನು. ಪ್ರತಿಯೊಂದಕ್ಕೂ ನಾನೇ ಸರ್ವೇಶ್ವರನು. ಲೋಕದಲ್ಲಿ ಯಾವಾಗ ಧರ್ಮವು ಖಿಲವಾಗುವುದೋ, ಜನರಲ್ಲಿ ನೀತಿನಿಯಮಗಳು ಹಾದಿತಪ್ಪುವ ಅಪಾಯ ಒದಗುವುದೋ, ಆಗ ನಾನು ಅವತಾರವಾಗಿ ಪ್ರತ್ಯಕ್ಷವಾಗುವೆನು. ಯುಗಯುಗಗಳಲ್ಲು ನಾನು ದುಷ್ಟಶಿಕ್ಷಣ ಶಿಷ್ಟರಕ್ಷಣಗಳಿಗಾಗಿ ಹಾಗೂ ಧರ್ಮಸಂಸ್ಥಾಪನೆ ಮಾಡುವುದಕ್ಕಾಗಿ ಹುಟ್ಟಿ ಬರುವೆನು. ನನ್ನಲ್ಲಿರುವ ದಿವ್ಯತೆಯನ್ನು ತಿಳಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಅದನ್ನರಿತ ಎಲ್ಲೋ ಕೆಲವರು ಪುನರ್ಜನ್ಮವಿಲ್ಲದೆ ನನ್ನನ್ನೇ ಸೇರುವರು. ಅವರಿಗೆ ಕಾಮಕ್ರೋಧಗಳಾಗಲಿ ಭಯವಾಗಲಿ ಇರುವುದಿಲ್ಲ. ಅವರು ನನ್ನನ್ನೇ ಮೊರೆಹೊಕ್ಕು ನನ್ನಲ್ಲೇ ಐಕ್ಯರಾಗುವರು. ಅವರು ಯಾವ ರೂಪದಿಂದಲಾದರೂ ನನ್ನನ್ನು ಪೂಜಿಸಲಿ, ಯಾವ ಮಾರ್ಗದಿಂದಲಾದರೂ ನನ್ನನ್ನು ಬಳಿಸಾರಲಿ: ಎಲ್ಲ ಮಾರ್ಗಗಳೂ ನನ್ನಲ್ಲಿಯೇ ಕೊನೆಗೊಳ್ಳುವುವು; ನಾನು ಅವರನ್ನು ಹಾಗೆ ಹಾಗೆಯೇ ಸ್ವೀಕರಿಸುವೆನು.  
      ಈ ಕರ್ಮಯೋಗದ ವಿಚಾರವಾಗಿ ಇನ್ನೂ ಸ್ವಲ್ಪ ಹೇಳುವೆನು ಕೇಳು. ಮನುಷ್ಯನು ಕೈಕೊಳ್ಳುವ ಯಾವುದೇ ಕೆಲಸವು ಫಲಾಪೇಕ್ಷೆಯಿಂದ ಮುಕ್ತವಾಗಿರಬೇಕು. ಅಗ ಮಾತ್ರವೇ ಅವನು ಸುಖವಾಗಿರುವನು. ಫಲಾಪೇಕ್ಷೆಯಿಲ್ಲದೆ ಇರುವುದರಿಂದ, ನಿರಂತರವಾಗಿ ಅವನು ಕೆಲಸ ಮಾಡುತ್ತಿದ್ದರೂ, ಕೆಲಸ ಮಾಡದೇ ಇರುವವನಂತೆಯೇ ಇರಲು ಅವನಿಗೆ ಸಾಧ್ಯ. ಆತ್ಮಜ್ಞಾನವು ಎಲ್ಲ ಕರ್ಮವನ್ನೂ ಭಸ್ಮೀಭೂತವನ್ನಾಗಿಸಿ, ಮನುಷ್ಯನನ್ನು ಕರ್ಮಬಂಧನದಿಂದ ಬಿಡುಗಡೆ ಮಾಡುವುದು. ಯಾವನು ಜ್ಞಾನದಿಂದ, ನಿಸ್ವಾರ್ಥ ಕರ್ಮದಿಂದ ಪ್ರೇರಿತನಾಗಿರುವನೋ ಅವನು ಸಮಸ್ತ ಸಂಶಯಗಳಿಂದ ಮುಕ್ತನಾಗಿ ನನ್ನೊಂದಿಗೆ ಸೇರಿಹೋಗುವನು. ನೀನು ಕರ್ಮಫಲಗಳನ್ನು ನನಗೆ ಅರ್ಪಿಸಿಬಿಟ್ಟರೆ ನಿನ್ನ ಮನಸ್ಸು ಶುದ್ಧವಾಗಿ ನಿನಗೆ ಶಾಂತಿ ದೊರಕುವುದು. ಆಸೆಯಿಂದ ಪ್ರೇರಿತನಾದ ಸ್ವಾರ್ಥಿಯಉ ಕರ್ಮಫಲಕ್ಕೆ ಅಂಟಿಕೊಂಡು ಪ್ರಾಪಂಚಿಕನಾಗಿಬಿಡುವನು. ಯಾರು ಕರ್ಮವನ್ನು ವಿಧಿವತ್ತಾಗಿ ಮಾಡುತ್ತ, ಆದರೂ ಕರ್ಮಫಲದಲ್ಲಿ ಅನಾಸಕ್ತನಾಗಿರುವನೋ ಅವನೇ ಯೋಗಿ, ಅವನೇ ಸನ್ಯಾಸಿ. ತ್ಯಾಗವೆಂದರೆ ನಿಸ್ವಾರ್ಥ ಕರ್ಮ. ತ್ಯಾಗವೆಂದರೆ ಆಸೆಯನ್ನು ಬಿಡುವುದೆ ಹೊರತು ಇನ್ನೇನು ಅಲ್ಲ. ತ್ಯಾಗಯೋಗವನ್ನು ಪಡೆಯುವುದಕ್ಕೆ ಇರುವುದು ಕರ್ಮಮಾರ್ಗವೊಂದೇ. ಒಮ್ಮೆ ಮನುಷ್ಯನಿಗೆ ಅದು ಲಭ್ಯವಾದರೆ, ಮನಶ್ಶಾಂತಿ ತನ್ನಷ್ಟಕ್ಕೆ ತಾನೇ ಬರುವುದು. ``ಶಕ್ತಿಯಿಂದ ಬರುವ ಸುಖಗಳು ಕೇವಲ ನೋವಿನ ಮೂಲಗಳು. ಅವುಗಳಿಗೆ ಪ್ರಾರಂಭ ಅಂತ್ಯಗಳಿರುವುದರಿಂದ ಅವು ಚಿರಂತನವಾಗಿರಲು ಸಾಧ್ಯವಿಲ್ಲ. ವಿವೇಕಿಯಾದವನು ಅವುಗಳನ್ನು ಬಿಟ್ಟುಬಿಡಬೇಕು. ಮನುಷ್ಯನು ಯಾವಾಗ ಶೀತೋಷ್ಣ ಸುಖದುಃಖ ಮಾನಾಪಮಾನಗಳನ್ನು ಸಮನಾಗಿ ಕಾಣಬಲ್ಲನೋ ಅವನು ಚಿರಶಾಂತಿ ಪಡೆಯಬಲ್ಲ. ಮಣ್ಣು ಕಲ್ಲು ಚಿನ್ನ ಎಲ್ಲವು ಅವನಿಗೆ ಒಂದೇ ಅಗಿ ಕಾಣುವುವು. ಶತ್ರುಮಿತ್ರರಲ್ಲಿ, ಉದಾಸೀನರಲ್ಲಿ, ಪಕ್ಷಪಾತವಿಲ್ಲದವರಲ್ಲಿ, ದ್ವೇಷಿಗಳಲ್ಲಿ ಹಾಗೂ ಸಜ್ಜನರಲ್ಲಿ ಅವನು ವ್ಯತ್ಯಾಸವನ್ನೇ ಕಾಣುವುದಿಲ್ಲ. ಅಂತಹ ಮನುಷ್ಯನೇ ಉನ್ನತೋನ್ನತನು.  
     ಅರ್ಜುನ, ಗಮನವಿಟ್ಟು ಕೇಳು. ಗುಹ್ಯಾತ್ ಗುಹ್ಯವಾದ ರಹಸ್ಯವನ್ನು ನಿನಗೆ ಹೇಳುತ್ತೇನೆ. ಮಾನವ ರೂಪವನ್ನು ತಳೆದಿರುವುದರಿಂದ ಮೂರ್ಖರು ನನ್ನನ್ನು ಸರ್ವೇಶ್ವರನೆಂದು ಪರಿಗಣಿಸುವುದಿಲ್ಲ. ಏಕನೂ ವಿಶಿಷ್ಟನೂ ಆದ ನನ್ನನ್ನು ಪೂಜಿಸುವುದರಿಂದ ಮಾನವನು ನನ್ನನ್ನೇ ಎಂದರೆ ಪರಮಗತಿಯನ್ನೇ ಪಡೆಯುತ್ತಾನೆ. ಈ ವಿಶ್ವಸಮಸ್ತಕ್ಕೂ ನಾನು ಈಶ್ವರನು. ಎಲ್ಲ ಪೂಜೆ ಧ್ಯಾನಗಳ ಗಮ್ಯನು ನಾನು. ನನ್ನನ್ನು ಯಾರು ಧ್ಯಾನಿಸಿ ಪೂಜಿಸುವರೋ ಅವರು ಕೊನೆಗೆ ನನ್ನನ್ನೇ ಬಂದು ಸೇರುವರು. ನನ್ನ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ. ಏನನ್ನು ನೀನು ತಿನ್ನುವಿಯೋ, ಏನನ್ನು ನೀನು ಮಾಡುವಿಯೋ, ಏನನ್ನು ನೀನು ಕೊಡುವೆಯೋ, ಯಾವ ಯಜ್ಞವನ್ನು ಮಾಡುವೆಯೋ ಅದನ್ನು ನನಗೆ ಅರ್ಪಿಸಿಬಿಡು. ನೀನು ಆಗ ಕರ್ಮಬಂಧದಿಂದ ಮುಕ್ತನಾಗಿ ಉಳಿಯುವೆ; ಒಳ್ಳೆಯ, ಕೆಟ್ಟ ಕರ್ಮಫಲಗಳು ನಿನ್ನನ್ನು ಆಗ ತಾಗಲಾರವು. ನನ್ನ ಬಳಿಗೆ ಬರಲು ನೀನು ಸ್ವತಂತ್ರನಾಗುವೆ" ಎಂದನು.  
     ಅಗ ಅರ್ಜುನನು, ``ಧ್ಯಾನದಿಂದ ನಿನ್ನನ್ನು ಹೇಗೆ ಅರಿತುಕೊಳ್ಳಬಹುದು ಎಂಬುದನ್ನು ತಿಳಿಸು. ನಿನ್ನ ಶಕ್ತಿ ಹಾಗೂ ವೈಭವಗಳನ್ನು ಕುರಿತೂ ತಿಳಿಯಬೇಕೆಂಬಾಸೆ ನನಗಿದೆ. ನೀನು ಎಲ್ಲಿರುವೆ? ನಿನ್ನನ್ನು ಎಲ್ಲಿ ಹುಡುಕಬೇಕು?" ಎಂದು ಕೇಳಲು, ಕೃಷ್ಣನು, ``ಪ್ರತಿಯೊಂದರ ಹೃದಯದ ಆತ್ಮನಾಗಿ ನಾನು ನೆಲೆಗೊಂಡಿರುವೆ. ಆದಿ ಮಧ್ಯ ಅಂತ ಮೂರೂ ನಾನೇ. ಆದಿತ್ಯರಲ್ಲಿ ನಾನು ವಿಷ್ಣುವು; ಜ್ಯೋತಿಗಳಲ್ಲಿ ಸೂರ್ಯನು; ಅಕಾಶಕಾಯಗಳಲ್ಲಿ ಚಂದ್ರನು; ವೇದಗಳಲ್ಲಿ ಸಾಮವು; ಇಂದ್ರಿಯಗಳಲ್ಲಿ ಮನಸ್ಸು; ಜೀವಿಗಳಲ್ಲಿ ಬುದ್ಧಿಯು; ರುದ್ರರಲ್ಲಿ ಶಂಕರನು; ಪರ್ವತಗಳಲ್ಲಿ ಮೇರುವು; ಪದಗಳಲ್ಲಿ ಓಂಕಾರವು; ಅಯುಧಗಳಲ್ಲಿ ವಜ್ರವು; ಅಳತೆಗಳಲ್ಲಿ ಕಾಲ; ಸರ್ವನಾಶಕ ಮೃತ್ಯು ಹಾಗೂ ಹುಟ್ಟಲಿರುವುಗಳ ಮೂಲ; ಜೀವಿಗಳ ಬೀಜರೂಪ; ಚರಾಚರ ವಸ್ತುಗಳಲ್ಲಿ ನನ್ನನ್ನುಳಿದು ಯಾವುದೂ ಇಲ್ಲ. ಯಾವುದು ವೈಭವದಿಂದ ಕೂಡಿದೆಯೋ ಯಾವುದು ಸುಂದರವೋ, ಯಾವುದು ಶಕ್ತಿಯುತವಾಗಿರುವುದೋ ಅದು ನನ್ನದೇ ವಿಭವದ ತುಣುಕು. ಕೇವಲ ಅಲ್ಪಾಂಶ ಮಾತ್ರದಿಂದ ನಾನು ಈ ವಿಶ್ವವನ್ನು ವ್ಯಾಪಿಸಿಕೊಂಡಿರುವೆನು" ಎಂದನು. ಅದಕ್ಕೆ ಆ ಅರ್ಜುನನು ``ನಾನು ನಿನ್ನ ದಿವ್ಯರೂಪವನ್ನು ನೋಡಲು ಬಯಸುತ್ತೇನೆ. ಹೇ ಯೋಗೀಶ್ವರನೆ, ನಾನು ಅದನ್ನು ತಡೆದುಕೊಳ್ಳಬಹುದಾದರೆ, ದಯವಿಟ್ಟು ಆ ರೂಪವನ್ನು ನನಗೆ ತೋರಿಸು" ಎಂದು ಬೇಡಿಕೊಂಡನು.

No comments:

Post a Comment