Suprabatham
🕉 *ಮಹಾಭಾರತಕಥಾ* ಭೀಷ್ಮಪರ್ವ-2 🕉
ದುರ್ಯೋಧನನು ಪಾಂಡವರ ಕಡೆಯ ವ್ಯೂಹರಚನೆಯನ್ನು ನೋಡಿ ದ್ರೋಣನಲ್ಲಿಗೆ ಹೋಗಿ, ``ಆಚಾರ್ಯ, ಪಾಂಡವರ ಈ ಮಹಾಸೈನ್ಯವನ್ನು ನೋಡಿದೆಯಾ! ನಿನ್ನ ಶಿಷ್ಯ ಧೃಷ್ಟದುಮ್ನ ಎಂಥ ಅಧ್ಭುತ ವ್ಯೂಹ ರಚಿಸಿದ್ದಾನೆ! ಭೀಮಾರ್ಜುನರಲ್ಲದೆ ಇತರ ಮಹಾವೀರರೂ ಅಲ್ಲಿ ಕಾಣಿಸುತ್ತಿದ್ದಾರೆ. ಸಾತ್ಯಕಿ, ಅವನ ಹಿಂದೆ ವಿರಾಟ ದ್ರುಪದರೊಂದು ಕಡೆ. ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಅವರ ಹಿಂದೆ ಪುರುಜಿತ್, ಕುಂತಿಭೋಜ, ಶೈಬ್ಯ ಇನ್ನೊಂದು ಕಡೆ. ದ್ರುಪದನ ಮಕ್ಕಳಾದ ಯುಧಾಮನ್ಯು ಉತ್ತಮೌಜಸ್ಸು ಅರ್ಜುನನ ರಥದ ಪಕ್ಕದಲ್ಲೇ ಇದ್ದಾರೆ. ಅಭಿಮನ್ಯು ದ್ರೌಪದಿಯ ಮಕ್ಕಳೊಟ್ಟಿಗೆ ಇದ್ದಾನೆ. ಇವರೆಲ್ಲರೂ ಮಹಾರಥಿಕರು.
ಇನ್ನು ನಮ್ಮ ಕಡೆ ಇರುವ ವೀರರು: ಕುರುಪಿತಾಮಹನಾದ ಭೀಷ್ಮ; ರಾಧೇಯ ಮತ್ತು ಕೃಪ- ಇವನು ಯುದ್ಧದಲ್ಲಿ ಸೋಲೆಂಬುದನ್ನೇ ಅರಿಯನು. ಇನ್ನು ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗ ಭೂರಿಶ್ರವಸ್ಸು ಇವರುಗಳು ನನಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರಲ್ಲಿ ಕೆಲವರು. ಭೀಷ್ಮನಿಂದ ರಕ್ಷಿತವಾದ ಈ ನನ್ನ ಸೈನ್ಯವು ಅಮಿತವಾದದ್ದು; ಭೀಮನಿಂದ ರಕ್ಷಿತವಾದ ಅವರ ಸೈನ್ಯವಾದರೋ ಮಿತವಾಗಿರುವಂತೆ ತೋರುತ್ತಿದೆ. ಆಚಾರ್ಯ, ಯುದ್ಧ ಇನ್ನೇನು ಪ್ರಾರಂಭವಾಗುತ್ತದೆ; ನೀನು ಭೀಷ್ಮನನ್ನು ರಕ್ಷಿಸಿಕೊಳ್ಳಬೇಕು. " ಎಂದನು.
ದೂರದಿಂದ ಇದನ್ನೆಲ್ಲ ನೋಡಿದ ಭೀಷ್ಮನು ತನ್ನ ಮೊಮ್ಮಗನಿಗೆ ಧೈರ್ಯ ತುಂಬುವುದಕ್ಕಾಗಿ ಸಿಂಹನಾದಮಾಡಿ ತನ್ನ ಶಂಖವನ್ನು ದೊಡ್ಡದಾಗಿ ಊದಿದನು. ಇದನ್ನನುಸರಿಸಿ ಉಳಿದ ವೀರರೂ ತಮ್ಮ ತಮ್ಮ ಶಂಖಗಳನ್ನೂದಿದರು. ಕೃಷ್ಣನು ತನ್ನ ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ, ಭೀಮನು ಪೌಂಡ್ರವನ್ನೂ, ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಒಬ್ಬರಾದ ಮೇಲೊಬ್ಬರಂತೆ ಊದಿದರು. ಅನಂತರ ಕಾಶೀರಾಜ, ಶಿಖಂಡಿ, ಸಾತ್ಯಕಿ, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ದ್ರೌಪದಿಯ ಮಕ್ಕಳು, ಅಭಿಮನ್ಯು ಎಲ್ಲರೂ ಅವರವರ ಶಂಖಗಳನ್ನೂದಿ ಮಹಾಧ್ವನಿಯನ್ನು ಉಂಟುಮಾಡಿದರು.
ಹನುಮಧ್ವಜದಿಂದ ಅಲಂಕೃತವಾದ ಅರ್ಜುನನ ರಥವು ಮುಂದೆ ಬಂದಿತು. ಅಜ್ಜ ರಚಿಸಿದ ವ್ಯೂಹ ಈಗ ಅವನ ಕಣ್ಣಿಗೆ ಬಿದ್ದಿತು. ಆ ಮಹಾವರ್ಣದಲ್ಲಿ ಅರ್ಜುನನು ತನ್ನ ಗಾಂಡೀವವನ್ನು ಕೈಗೆ ತೆಗೆದುಕೊಂಡು, ``ಕೃಷ್ಣ, ನನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸು. ನನ್ನ ವಿರುದ್ಧ ಸೆಣೆಸಲು ನಿಂತಿರುವ ವೀರರುಗಳಾರೆಂದು ನೋಡಬಯಸುತ್ತೇನೆ. ದುರ್ಯೋಧನನ ಪ್ರೀತ್ಯರ್ಥವಾಗಿ ಬಂದಿರುವವರೆಲ್ಲರನ್ನೂ ನಾನು ಕಾಣಬಯಸುತ್ತೆನೆ" ಎಂದನು. ಅದರಂತೆ ಕೃಷ್ಣನು ಭೀಷ್ಮದ್ರೋಣಾದಿಗಳ ಮುಂದೆ ರಥವನ್ನು ನಿಲ್ಲಿಸಿ, ``ಅರ್ಜುನ, ಭೀಷ್ಮ ದ್ರೋಣರು ಮುನ್ನಡೆಸುತ್ತಿರುವ ಕೌರವಸೈನ್ಯವನ್ನು ನೋಡು. ನಿನ್ನ ಕೈಯಲ್ಲಿ ಪ್ರಾಣ ಬಿಡಲು ಬಂದಿರುವವರೆಲ್ಲರನ್ನು ನೋಡಿಬಿಡು"ಎಂದನು.
ಅರ್ಜುನ ಎಲ್ಲರನ್ನು ನೋಡಿದನು. ಕಣ್ಣೆವೆಯಿಕ್ಕದೆ ನೋಡಿಯೇ ನೋಡಿದನು. ಅಲ್ಲಿದ್ದ ವೀರರೆಲ್ಲರು ತನ್ನ ಪ್ರೀತಿಪಾತ್ರರೇ! ಅಜ್ಜ, ಗುರುಗಳು, ಚಿಕ್ಕಪ್ಪ ದೊಡ್ಡಪ್ಪಂದಿರು, ಮಕ್ಕಳು, ಗೆಳೆಯರು, ನೋಡನೋಡುತ್ತ ಅವನ ಅಂತಃಕರಣ ತುಂಬಿ ಬಂದಿತು. ಹೃದಯದಲ್ಲಿ ಮಹಾ ದಯೆಯುಂಟಾಯಿತು. ಗದ್ಗದ ಕಂಠದಿಂದ, ``ಕೃಷ್ಣ, ನನ್ನ ದೇಹ ದುರ್ಬಲವಾಗುತ್ತಿದೆ. ಬಾಯಿ ಒಣಗುತ್ತಿದೆ, ಇದ್ದಕ್ಕಿದಂತೆ ನಡುಕ ಬಂದಿದೆ: ತಲೆತಿರುಗಿ ಮೂರ್ಛೆಹೋಗುವಂತೆ ಆಗುತ್ತಿದೆ: ಮೊಣಕಾಲುಗಳು ನಡುಗುತ್ತಿವೆ, ಜ್ವರ ಬಂದಂತಾಗಿದೆ, ಗಾಂಡೀವವು ಕೈಯಿಂದ ಜಾರುತಿದೆ. ನಮ್ಮವರೇ ಆದ ಇವರ ಜೊತೆಗೆ ನಾನು ಯುದ್ಧಮಾಡಲಾರೆ. ಕಾಣಿಸುತ್ತಿರುವ ಕೆಟ್ಟ ಶಕುನಗಳನ್ನಾದರೂ ನೋಡು, ಕೃಷ್ಣ! ಬಂಧುಗಳ ಹತ್ಯೆಯಿಂದ ಪ್ರಯೋಜನವಿಲ್ಲ. ಈ ಯುದ್ಧವನ್ನು ಜಯಿಸುವುದರಿಂದ ಬರುವ ರಾಜ್ಯವಾಗಲಿ ಸುಖಗಳಾಗಲಿ ನನಗೆ ಬೇಡ. ಈ ಮಹಾವೀರರುಗಳ ಮೇಲೆ ನನಗೆ ಅತಿಶಯವಾದ ಪ್ರೀತಿಯಿದೆ: ಮೂರು ಲೋಕಗಳ ಸ್ವಾಮ್ಯವನ್ನೇ ಕೊಟ್ಟರೂ ನಾನವರನ್ನು ಕೊಲ್ಲಲಾರೆ. ಕೇವಲ ರಾಜ್ಯಲಾಭಕ್ಕಾಗಿ ಧಾರ್ತರಾಷ್ಟ್ರರನ್ನು ಕೊಲ್ಲಲೆ? ಅವರು ಕೆಟ್ಟವರು, ಲೋಭಿಗಳು, ಕಳ್ಳರು, ಎಲ್ಲಾ ಸರಿ. ಆದರೆ ಅವರು ನನ್ನ ಸೋದರರು: ಅವರನ್ನು ಕೊಲ್ಲುವುದು ಪಾಪ. ನಾನು ಯುದ್ಧದಿಂದ ಹಿಂದಿರುಗುತ್ತೇನೆ; ದುರ್ಯೋಧನನೇ ಬೇಕಾದರೆ ನನ್ನನ್ನು ಕೊಲ್ಲಲಿ; ನನಗಂತೂ ಯುದ್ಧ ಬೇಡವೇ ಬೇಡ" ಎಂದವನೇ ಅರ್ಜುನನು ಬಿಲ್ಲುಬಾಣಗಳನ್ನೆಸೆದು ರಥದಲ್ಲಿ ಕುಸಿದು ಕುಳಿತುಬಿಟ್ಟನು. ಅವನ ಹೃದಯವು ಭಾರವಾಯಿತು;ಕಣ್ಣೀರು ತುಂಬಿತು; ಮನಸ್ಸು ದಯೆಯಿಂದ ತುಂಬಿಹೋಯಿತು.
ಕ್ಷಣಕಾಲ ಅವನನ್ನು ನೋಡಿದ ಕೃಷ್ಣನು ``ಅರ್ಜುನ, ಇಂತಹ ವಿಷಮ ಸಮಯದಲ್ಲಿ ಆರ್ಯ ಯೋಗ್ಯವಲ್ಲದ, ಕೀರ್ತಿನಾಶಕವಾದ ಈ ಮೋಹವೆ? ಷಂಡನಂತೆ ವರ್ತಿಸಬೇಡ; ತುಚ್ಛವಾದ ಈ ಹೃದಯದೌರ್ಬಲ್ಯವನ್ನು ಬಿಟ್ಟು ಮೇಲೇಳು" ಎಂದನು. ಆದರು ಅರ್ಜುನನ ವಿಷಣ್ಣತೆ ತೊಲಗಲಿಲ್ಲ. ಕೃಷ್ಣ, ಪೂಜಾರ್ಹರಾದ ಭೀಷ್ಮದ್ರೋಣರ ಮೇಲೆ ನಾನು ಹೇಗೆ ಬಾಣಪ್ರಯೋಗಮಾಡಲಿ? ಅವರನ್ನು ಕೊಂದು ರಕ್ತಸಿಕ್ತವಾದ ಭೋಗವನ್ನುಣ್ಣುವುದಕ್ಕಿಂತ ಭಿಕ್ಷಾನ್ನವನ್ನುಂಡು ಬದುಕುವುದು ಒಳ್ಳೆಯದು. ಯುದ್ಧದಲ್ಲಿ ಯಾರಿಗೆ ಜಯವೋ ಯಾರಿಗೆ ಗೊತ್ತು? ಯಾರನ್ನು ಕೊಲ್ಲಲು ನನಗಿಷ್ಟವಿಲ್ಲವೋ ಆ ಕೌರವರೇ ನನ್ನೆದುರು ನಿಂತಿದ್ದಾರೆ. ನಾನೇನೂ ಹೇಡಿಯಲ್ಲವೆಂದು ನಿನಗೆ ಗೊತ್ತು. ಇದು ದೌರ್ಬಲ್ಯವಲ್ಲ, ದಯೆ. ನನಗೇನು ಮಾಡಬೇಕೆಂಬುದೇ ತೋಚುತ್ತಿಲ್ಲ. ಕೃಷ್ಣ, ಯಾವುದು ನನಗೆ ಶ್ರೇಯಸ್ಕರವೋ ನೀನೇ ಹೇಳು, ನೀನು ಹೇಳಿದಂತೆ ಮಾಡುತ್ತೇನೆ" ಎಂದವನೇ ಅರ್ಜುನನು ಸುಮ್ಮನೆ ಕುಳಿತುಬಿಟ್ಟನು.
No comments:
Post a Comment