Tuesday, 9 August 2016

ಮಹಾಭಾರತಕಥಾ* ಭೀಷ್ಮಪರ್ವ-6

Suprabatham 

🕉 *ಮಹಾಭಾರತಕಥಾ* ಭೀಷ್ಮಪರ್ವ-6🕉
           ಕೃಷ್ಣನು ಅವನಿಗೆ ದಿವ್ಯದೃಷ್ಟಿಯನ್ನು ಅನುಗ್ರಹಿಸಿ ಅನಂತರ ತನ್ನ ದಿವ್ಯವಾದ ವಿಶ್ವರೂಪವನ್ನು ತೋರಿಸಿದನು. ಸಹಸ್ರಸೂರ್ಯರು ಒಟ್ಟಿಗೇ ಉದಯಿಸಿದಂತೆ ಇದ್ದ ಕೃಷ್ಣನ ವಿಶ್ವರೂಪದ ದಿವ್ಯತೆಯನ್ನು ಅರ್ಜುನನು ನೋಡಿದನು. ಅನೇಕ ಪ್ರಕಾರದ ವೈವಿಧ್ಯತೆಯನ್ನುಳ್ಳ ಜಗತ್ತೆಲ್ಲವೂ ಆ ಕೃಷ್ಣನಲ್ಲಿಯೇ ಒಂದಾಗಿ ಸೇರಿಹೋಗಿದ್ದಿತು. ತಗ್ಗಿಸಿದ ತಲೆಯುಳ್ಳವನಾಗಿ, ಭಕ್ತಿಯಿಂದ ಕೈ ಜೋಡಿಸಿಕೊಂಡು, ಅರ್ಜುನನು, ``ದೇವದೇವ! ಸಮಸ್ತ ಜೀವರಾಶಿಗಳನ್ನು ಋಷಿಗಳನ್ನು ಬ್ರಹ್ಮ ಮುಂತಾದ ದೇವತೆಗಳನ್ನು ನಿನ್ನ ಶರೀರದಲ್ಲಿ ನೊಡುತ್ತಿದ್ದೇನೆ. ಆದಿ ಮಧ್ಯ ಅಂತ್ಯ ಎಂಬುದಿಲ್ಲದ ಅನಂತರೂಪನು ನೀನು. ಅವಿನಾಶಿಯೂ ತೇಜೋರಾಶಿಯೂ ಆದ ನೀನು ಸಾಕ್ಷಾತ್ಕರಿಸಿಕೊಳ್ಳಬೇಕಾದ ಪರಮಾತ್ಮನು. ಈ ಇಡೀ ವಿಶ್ವದ ನೆಲೆಯು. ಆದಿಮೂಲನಾದ ನೀನು ನಿತ್ಯನೂತನ ಸ್ಥಾಯೀ ಪ್ರಕೃತಿಯ ರಕ್ಷಕನು. ಚಂದ್ರಸೂರ್ಯರೇ ನಿನ್ನ ಕಣ್ಣುಗಳು; ಮುಖವೇ ಈ ಇಡೀ ವಿಶ್ವವನ್ನು ಭಕ್ಷಿಸುತಿರುವ ಅಗ್ನಿಯು; ಭೂಮಿ ಸೂರ್ಯ ಅಂತರಿಕ್ಷ ಎಲ್ಲವನ್ನೂ ನೀನು ಅವರಿಸಿರುವೆ. ನಿನ್ನನ್ನು ನೋಡಿ ಲೋಕವೆಲ್ಲ ನಡುಗುತ್ತಿರುವುದು; ನಾನೂ ನಡುಗುತ್ತಿರುವೆನು. ಪರ್ವತದ ನದಿಗಳು ಸಾಗರವನ್ನು ಸೇರುವುದಕಾಗಿ ಧಾವಿಸಿ ಬರುವಂತೆ, ಧಾರ್ತರಾಷ್ಟ್ರರು, ನಮ್ಮ ಕಡೆಯ ಹಾಗೂ ಅವರ ಕಡೆಯ ವೀರರು ಎಲ್ಲರೂ ಅಗ್ನಿಮಯವಾದ ನಿನ್ನ ಬಾಯನ್ನು ಸೇರುವುದಕ್ಕೆ ಧಾವಿಸಿ ಬರುತ್ತಿರುವರು. ಬೆಂಕಿಯಲ್ಲಿ ಬಂದು ಬೀಳುವ ಪತಂಗಗಳಂತೆ ನಿನ್ನ ಬಾಯೊಳಕ್ಕೆ ಬಿದ್ದು ನಾಶವಾಗುತ್ತಿರುವರು. ನನ್ನ ಮೇಲೆ ದಯವಿಟ್ಟು ನೀನಾರೆಂಬುದನ್ನು ನನಗೆ ತಿಳಿಸಿಕೊಡು. ನನಗೆ ಭಯವನ್ನುಂಟುಮಾಡುತ್ತಿರುವ ಈ ಸರ್ವನಾಶದ ಉದ್ದೇಶವೇನು?" ಎಂದು ಕೇಳುತ್ತ ಶರಣಾಗತನಾದನು.  
        ಕೃಷ್ಣನು, ``ನಾನು ಯಾರೆಂಬುದನ್ನು ಅರಿಯೆಯಾ? ಲೋಕನಾಶಕನಾದ ಕಾಲನೇ ನಾನು. ಈ ಮಹಾವೀರರುಗಳಲ್ಲಿ ಒಬ್ಬೊಬ್ಬರೂ ನನ್ನ ಕೈಯಲ್ಲಿ ಸಾಯಲಿರುವರು. ಎದ್ದೇಳು ಅರ್ಜುನ, ಎದ್ದು ಕೀರ್ತಿಭಾಜನನಾಗು. ಭೀಷ್ಮ ದ್ರೋಣ ರಾಧೇಯ ಜಯದ್ರಥ ಮೊದಲಾದ ಇವರೆಲ್ಲ ಒಂದು ರೀತಿಯಿಂದ ಈಗಾಗಲೇ ನನ್ನಿಂದ ಸತ್ತಿರುವರು. ಈ ಕೆಲಸದಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ಆದರೂ ಅವರನ್ನು ಕೊಲ್ಲುವ ಶಾಸ್ತ್ರ ಮಾಡಿ ಯುದ್ಧವನ್ನು ಗೆದ್ದುಕೋ!" ಎಂದನು. ಅರ್ಜುನನ ದನಿ ಗದ್ಗದವಾಯಿತು; ಪದಗಳು ಹೊರಡದಾದವು. ಅವನು ಕೈಮುಗಿದುಕೊಂಡು ``ಹೇ ದೇವದೇವ! ಅನಂತವೀರ್ಯ! ಜಗನ್ನಿವಾಸ! ಆದಿದೇವ! ಅನಂತರೂಪ! ಈ ವಿಶ್ವವೂ ಅದರಾಚಿನ ಅಸ್ತಿತ್ವವೂ ನೀನೇ. ಜ್ಞಾನವೂ ನೀನೇ ಜ್ಞೇಯವಸ್ತುವೂ ನೀನೇ. ಸರ್ವವ್ಯಾಪಿಯಾದ ನೀನೇ ಸಕಲಕ್ಕೂ ಆಶ್ರಯನು. ನಿನಗೆ ಸಮಾನರಾದವರು ಮೂರು ಲೋಕಗಳಲ್ಲಿಯೂ ಇಲ್ಲ. ನಿನಗೆ ಶರಣಾಗತನಾಗಿ ಕೃಪೆಮಾಡೆಂದು ಬೇಡುತ್ತಿದ್ದೇನೆ. ನಿನ್ನ ಹಿರಿಮೆಯನ್ನು ಅರಿಯದೆಯೆ ನಿನ್ನನ್ನು `ಕೃಷ್ಣಾ!' ಎಂದೆ, `ಮಿತ್ರಾ!' ಎಂದೆ; ನನ್ನ ಅಜ್ಞಾನವನ್ನು ಮನ್ನಿಸು. ತಂದೆಯ ಮಗನನ್ನು, ಮಿತ್ರನು ಮಿತ್ರನನ್ನು, ಪ್ರೇಮಿಯು ಪ್ರೇಮಿಯನ್ನು ಕ್ಷಮಿಸುವಂತೆ ನನ್ನನ್ನು ದಯವಿಟ್ಟು ಕ್ಷಮಿಸು. ದಯವಿಟ್ಟು ನಿನ್ನ ಮುಂಚಿನ ಸೌಮ್ಯರೂಪವನ್ನು ಧರಿಸು; ಈ ನಿನ್ನ ವಿಶ್ವರೂಪವನ್ನು ನಾನಿನ್ನು ತಾಳಿಕೊಳ್ಳಲಾರೆ!" ಎಂದು ಪ್ರಾರ್ಥಿಸಿಕೊಳ್ಳಲು, ಭಗವಂತನು ತನ್ನ ಎಂದಿನ ರೂಪವನ್ನು ತಳೆದು ಪುನಃ ಪಾರ್ಥಸಾರಥಿಯಾದ ಕೃಷ್ಣನಾದನು.  

      ಅರ್ಜುನನು, ``ನಿನ್ನ ಎಂದಿನ ರೂಪವನ್ನು ಕಂಡಮೇಲೆ, ಈಗ, ನನ್ನ ಮನಸ್ಸಿಗೆ ಶಾಂತಿ ಉಂಟಾಯಿತು." ಎನ್ನಲು ಕೃಷ್ಣನು, ``ಈ ನನ್ನ ವಿಶ್ವರೂಪವನ್ನು ನೋಡುವುದು ಸುಲಭ ಸಾಧ್ಯವಲ್ಲ. ಅದನ್ನು ಕೇವಲ ನನ್ನ ಮೇಲಣ ಅತಿಶಯವಾದ ಭಕ್ತಿಯಿರುವವರು ಮಾತ್ರ ಕಾಣಬಹುದು" ಎಂದನು.

No comments:

Post a Comment